Saturday, September 09, 2006

ಇಂದಿನ ನಿತ್ಯೋತ್ಸವ : ಕಹಿ ಸತ್ಯೋತ್ಸವ

(ಕವಿ ಶ್ರೀ. ನಿಸಾರ್ ಅಹಮದ್ ಅವರ ಕ್ಷಮೆ ಕೋರಿ)


ಬತ್ತಿ ನಿಂತ ಜೋಗದಲ್ಲಿ, ಸೊರಗಿ ಹರಿವ ತುಂಗೆಯಲ್ಲಿ,
ದಿನ ದಿನವೂ ನಶಿಸುತಿರುವ ಸಹ್ಯಾದ್ರಿಯ ಶಿಖರಗಳಲಿ,
ಚಿತ್ರಪಟಗಳಲ್ಲಿ ಮಾತ್ರ ಕಾಣಸಿಗುವ ಕಾಡುಗಳಲಿ,
ನಿತ್ಯೋತ್ಸವ, ತಾಯೆ ನಿತ್ಯೋತ್ಸವ,
ನಿತ್ಯೋತ್ಸವ, ನಿನಗೆ ನಿತ್ಯೋತ್ಸವ!

ಇತಿಹಾಸವ ದೂರ ತಳ್ಳಿ, ಸ್ವಾಭಿಮಾನಕಿಟ್ಟು ಕೊಳ್ಳಿ,
ಮಾತೃಭಾಷೆಯನ್ನೆ ಮರೆತು, ಅನ್ಯಭಾಷೆಯೆಲ್ಲ ಕಲಿತು,
ಬೀಗುತಿರುವ ಕೋಟಿ ಕೋಟಿ ನಾಡಜನರ 'ಸ್ಪೀಚು'ಗಳಲಿ,
ನಿತ್ಯೋತ್ಸವ, ತಾಯೆ ನಿತ್ಯೋತ್ಸವ,
ನಿತ್ಯೋತ್ಸವ, ನಿನಗೆ ನಿತ್ಯೋತ್ಸವ!

ನಾಡೆ ಹರಿದು-ಹಂಚಿ ಹೋಗಿ ಕನ್ನಡ ಏನಾದರೇನು?
ತಮ್ಮ ಕುರ್ಚಿ ಭದ್ರ ಮಾಡಿ, ಜನರ ಹಣವ ತಿಂದು ತೇಗಿ,
ಕೇಕೆ ಹಾಕಿ ಮೆರೆಯುತಿರುವ ನಾಯಕರ ಭ್ರಷ್ಟತೆಯಲಿ,
ನಿತ್ಯೋತ್ಸವ, ತಾಯೆ ನಿತ್ಯೋತ್ಸವ,
ನಿತ್ಯೋತ್ಸವ, ನಿನಗೆ ನಿತ್ಯೋತ್ಸವ!

ಗುಂಡಿಬಿದ್ದ ರಸ್ತೆಗಳಲಿ, ಬೆಳೆಯಿಲ್ಲದ ಹೊಲಗಳಲ್ಲಿ,
ಐದು ದಶಕ ಕಳೆದ ಮೇಲೂ ಬೆಳಕಿಲ್ಲದ ಹಳ್ಳಿಗಳಲಿ,
ಸರ್ಕಾರದ ಕಡತಗಳಲಿ ಮಾತ್ರ ಸಿಗುವ ಪ್ರಗತಿಯಲ್ಲಿ,
ನಿತ್ಯೋತ್ಸವ, ತಾಯೆ ನಿತ್ಯೋತ್ಸವ,
ನಿತ್ಯೋತ್ಸವ, ನಿನಗೆ ನಿತ್ಯೋತ್ಸವ!

No comments: